Wednesday 4 July 2018

ನಾಲ್ವಡಿ ಕೃಷ್ಣ ರಾಜ ಒಡೆಯರ್ naalvadi krishnaraja vodeyar

ಮೈಸೂರಿನ ಅಶೋಕಪುರಂ ಮತ್ತು ನಾಲ್ವಡಿ



ಮೈಸೂರಿನಲ್ಲಿ ಅಶೋಕಪುರಂ ಎಂಬ ನಗರವಿದೆ. ಇಲ್ಲಿ ವಾಸಮಾಡುವ ಎಲ್ಲಾ ಜನರು ಮೂಲತಹ ದಲಿತರು. ಅಶೋಕಪುರಂ ನಲ್ಲಿ ಇಂದು ವಾಸ ಮಾಡುತ್ತಿರುವ ದಲಿತರು ಯಾರು ಕೂಡ ಅಲ್ಲಿಯವರಲ್ಲ, ಅವರೆಲ್ಲಾ ಮೂಲತಹ ಉತ್ತರ ಕರ್ನಾಟಕದವರು. ಬಹುಶ ಈ ಕಾರಣಕ್ಕೆ ಉತ್ತರ ಕರ್ನಟಕದವರಂತೆ ರಫ್ ಅಂಡ್ ಟಫ್ ಆಗಿರುವುದು ಎಂದು ಕ್ರಮೇಣ ನನಗನಿಸಿತು.

ಉತ್ತರ ಕರ್ನಾಟಕದಿಂದ ವಲಸೆ ಬಂದ ಈ ಜನಾಂಗ ಮೊದಲು ನೆಲೆಗೊಂಡದ್ದು ಮೈಸೂರಿನ ಅರಮನೆ ಮುಂಭಾಗದ ದೊಡ್ಡಕೆರೆ ಮೈದಾನದಲ್ಲಿ. ಆಗಿನ್ನೂ ಈಗಿನ ಹೊಸ ಅರಮನೆ ಇರಲಿಲ್ಲ. ಸಣ್ಣದೊಂದು ಗಂಧದ ಅರಮನೆ ಇತ್ತು. ದೊಡ್ಡಕೆರೆಯಲ್ಲಿ ಬೀಡುಬಿಟ್ಟಿದ್ದ ದಲಿತರನ್ನು ಅನಂತರ ಅಶೋಕಪುರಂ ಗೆ ಸ್ಥಳಾಂತರ ಮಾಡಲಾಯಿತು. ಆಗಿನ್ನು ಅದಕ್ಕೆ ಅಶೋಕಪುರಂ ಎಂಬ ಹೆಸರು ಬಂದಿರಲಿಲ್ಲ. ಸ್ಥಳಾಂತರಗೊಂಡ ಜನ ಅದಕ್ಕೆ ಆದಿ ಕರ್ನಾಟಕ ಪುರ ಎಂದು ನಾಮಕರಣ ಮಾಡಿಕೊಂಡಿದ್ದರು, ನಾಲ್ವಡಿ ಕೃಷ್ಣರಾಜ ಒಡೆಯರ್ ಒಮ್ಮೆ ಅಲ್ಲಿಗೆ ಭೇಟಿ ನೀಡಿ ಅಶೋಕ ಪುರಂ ಎಂದು ಮರು ನಾಮಕರಣ ಮಾಡಿದರು. ಅಂದಿನಿಂದ ಇಲ್ಲಿಯ ತನಕ ಅದು ಅಶೋಕ ಪುರಂ ಆಗಿಯೇ ಉಳಿದುಕೊಂಡಿದೆ. ಆದರು ಚರಿತ್ರೆಯನ್ನು ಹಾಗೆಯೇ ಉಳಿಸಿಕೊಂಡು ಬರಲಾಗಿದೆ.

ಇದರ ಜೊತೆಗೆ ಇನ್ನೊಂದು ಮುಖ್ಯವಾದ ವಿಚಾರವನ್ನು ನಾನು ಹೇಳಬೇಕಿದೆ. ನಾಲ್ವಡಿಯ ಅವರ ಗಂಧದ ಮರದ ಸಣ್ಣ ಅರಮನೆ ಅಗ್ನಿಗೆ ಆಹುತಿಯಾಗುತ್ತದೆ. ಇಡೀ ಅರಮನೆಯ ಸುಟ್ಟು ಹೋಗುತ್ತಿದ್ದ ಸಂದರ್ಭ. ಅಂತಹ ತುರ್ತಿನ ಸಂದರ್ಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದತ್ತು ಮಗ ಪುಟ್ಟಬಾಲಕ ಅರಮನೆಯ ಒಳಗೆ ಸಿಕ್ಕಿ ಹಾಕಿಕೊಂಡು ಕೂಗುತ್ತಿರುತ್ತದೆ. ಅಂತಹ ಸಂದಿಗ್ಧತೆಯ ಸ್ಥಿತಿಯಲ್ಲಿ ನಾಲ್ವಡಿ ಅವರ ಬೆಂಬಲಕ್ಕೆ ನಿಲ್ಲುವುದು ಒಬ್ಬರು ಮುಸಲ್ಮಾನರು, ಮತ್ತೊಬ್ಬರು ಅಶೋಕ ಪುರಂನ ದಲಿತರು. ಮುಸಲ್ಮಾನರು ಅರಮನೆಗಳ ಹೊತ್ತಿದ್ದ ಬೆಂಕಿ ಹಾರಿಸಲು ಮರಳು, ನೀರು ಇತ್ಯಾದಿ ವಸ್ತುಗಳ ಮೂಲಕ ಬೆಂಕಿಯನ್ನು ಹಾರಿಸಲು ಪ್ರಯತ್ನಿಸಿದರೆ, ದಲಿತರು ಅರಮನೆಗೆ ಹೊತ್ತಿದ್ದ ಬೆಂಕಿಯನ್ನು ಲೆಕ್ಕಿಸದೆ ತಮ್ಮ ಪ್ರಾಣವನ್ನು ಪಣವಿಟ್ಟು ನಾಲ್ವಡಿ ಅವರ ಮಗನನ್ನು ರಕ್ಷಿಸುತ್ತಾರೆ. ಅನಂತರ ಇಡೀ ಅರಮನೆಯೇ ಸುಟ್ಟು ಹೋಗಿ, ಹೊಸ ಅರಮನೆಯನ್ನು ಕಟ್ಟಿಸುತ್ತಾರೆ. ಅದೇ ಈಗಿರುವ ಅರಮನೆ.

ಈ ಘಟನೆಯ ನಂತರ ಕೃಷ್ಣರಾಜ ಓಡೆಯರ್ ಅವರು ಸುಮ್ಮನೆ ಕೂರಲಿಲ್ಲ. ನನ್ನ ಮಗನನ್ನು ಕಾಪಾಡಿದ ಮಹಾನುಭಾವರು ಯಾರು ಎಂದು ಹುಡುಕಿದರು, ಅನಂತರ ಅವರಿಗೆ ತಿಳಿದಿದ್ದು ಅಶೋಕಪುರಂ ನ ದಲಿತರು ನನ್ನ ಮಗನನ್ನು ಉಳಿಸಿದವರು ಎಂದು. ಆ ವಿಷಯ ತಿಳಿದ ತಕ್ಷಣ ನಾಲ್ವಡಿ ಅವರು ಕುದುರೆ ಏರಿ ಅಶೋಕಪುರಂ ಗೆ ತೆರಳಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕುದುರೆ ಏರಿ ಬರುತ್ತಿದ್ದನ್ನು ಕಂಡು ಅಶೋಕಪುರಂ ನ ದಲಿತರು, ರಾಜರ ಮಗನನ್ನು ಮುಟ್ಟಿದ ತಪ್ಪಿಗೆ ಶಿಕ್ಷೆ ಕೊಡಲು ಬರುತ್ತಿರಬಹುದೆಂದು ತಪ್ಪಾಗಿ ಊಹಿಸಿ ಎದುರಿ ಓಡುತ್ತಿದ್ದರು. ನಾಲ್ವಡಿಯ ಅವರು ಕುದುರೆಯಿಂದ ಇಳಿದು ದಯವಿಟ್ಟು ಯಾರು ಓಡಬೇಡಿ ನಾನು ನಿಮಗೆ ತೊಂದರೆ ಕೊಡಲು ಬಂದಿಲ್ಲ ಎಂದು ಹೇಳಿದ ತಕ್ಷಣ ಚದುರಿ ಹೋಗುತ್ತಿದ್ದ ಜನರೆಲ್ಲಾ ಅಲ್ಲಿಲ್ಲೇ ನಿಲ್ಲುತ್ತಾರೆ.

ನಾಲ್ವಡಿ ಅವರು, ಅಲ್ಲಿಯ ಜನರನ್ನು ಉದ್ದೇಶಿಸಿ. ನೋಡಿ ನೀವು ನನ್ನ ಮಗನನ್ನು ಉಳಿಸಿದವರು ಎಂದು ತಿಳಿಯಿತು. ಆ ಕಾರಣದಿಂದ ನಿಮಗೆ ನಾನು ಕೃತಜ್ಞತೆ ತಿಳಿಸಲು ಬಂದಿದ್ದೇನೆ. ಇಂತಹ ಸಂದರ್ಭದಲ್ಲಿ ನಿಮಗೇನು ಬೇಕು ಕೇಳಿ ನಾನು ಕೊಡುವೆ ಎಂದು ಹೇಳುತ್ತಾರೆ. ಅಲ್ಲಿದ್ದ ಕೆಲವು ಜನ ನಮಗೇನು ಬೇಡ ಎನ್ನುತ್ತಾರೆ. ಆದರೆ ಕೆಲವು ಮಂದಿ ನಮಗೆ ಯಾವುದೇ ಭೂ ಓಡೆತನವಿಲ್ಲ ಹಾಗಾಗಿ ನಮಗೆ ಕೊಟ್ಟರೆ ತುಂಡು ಭೂಮಿ ಕೊಡಿ ಸ್ವಾಮಿ ಎನ್ನುತ್ತಾರೆ. ಅವರಂತೆಯೇ ಓಡೆಯರ್ ಅವರು ಅಶೋಕಪುರಂ ನ ಪಕ್ಕದಲ್ಲೆ ಇರುವ ಇಡೀ ಎಲೆ ತೋಟವನ್ನೇ ಬರೆದು ಕೊಡುತ್ತಾರೆ. ಇಂದಿಗೂ ಅಶೋಕಪುರಂ ಪಕ್ಕದಲ್ಲಿರುವ ಕೋಟಿಗಟ್ಟಲೆ ಬೆಲೆ ಬಾಳುವ ಆ ಭೂಮಿ ಇಂದಿಗೂ ಅಲ್ಲಿನ ಜನರ ಕೈನಲ್ಲೆ ಇದೆ.

ಭೂಮಿ ಕೊಟ್ಟ ತಕ್ಷಣ ನಾಲ್ವಡಿ ಅವರು ಸುಮ್ಮನಾಗಲಿಲ್ಲ. ಇನ್ನೂ ಏನಾದರು ಕೊಡಬೇಕೆನಿಸಿ ಬೇರೆ ಏನಾದರು ಕೇಳಿ ಎಂದರು. ಎಲ್ಲರೂ ಬೇಡ ಮಹರಾಜರೇ ನಮಗಷ್ಟೆ ಸಾಕು ಎಂದರು. ನಾಲ್ವಡಿ ಅವರು ಸ್ವಲ್ಪ ಯೋಚಿಸುತ್ತಾ, ಮಹಾರಾಷ್ಟ್ರದಲ್ಲಿ ಕೊಲ್ಲಾಪುರದ ಶಾಹು ಮಹಾರಾಜರು ಅಂತ ಇದ್ದಾರೆ. ಅವರು ನಿಮ್ಮ ಜಾತಿಗೆ ಸೇರಿರುವ ಅಂಬೇಡ್ಕರ್ ಎಂಬ ವಿದ್ಯಾರ್ಥಿಯನ್ನು ವಿದೇಶದ ವಿಶ್ವವಿದ್ಯಾನಿಲಯವೊಂದರಲ್ಲಿ ಅನುಧಾನ ಕೊಟ್ಟು ಓದಿಸುತ್ತಿದ್ದಾರೆ, ನಿಮ್ಮಲ್ಲಿ ಅಂತವರಿದ್ದರೆ ಹೇಳಿ ನಾನು ಕೂಡ ವಿದೇಶದಲ್ಲಿನ ವಿಶ್ವವಿದ್ಯಾನಿಲಯಕ್ಕೆ ಕಳುಹಿಸಿ ಓದಿಸುವೆ ಎನ್ನುತ್ತಾರೆ. ಒಂದಕ್ಷರವನ್ನು ಓದದ ಆ ಜನ ಹೇಗೆ ಹೋಗಲು ಸಾಧ್ಯ? ನಾಲ್ವಡಿ ಅವರ ಈ ಮಾತನ್ನು ಕೇಳಿದ ಅಶೋಕಪುರಂ ನ ಅನಕ್ಷರಸ್ಥನೊಬ್ಬ, ಅಲ್ಲಾ ಸ್ವಾಮಿ ನೀವು ಯಾವುದೋ ದೇಸುಕ್ಕ. ಅದ್ಯಾವುದೋ ಇಸ್ವ ಇದ್ಯಾಲಯಕ್ಕ ಕಳ್ಸ ಬದ್ಲು ಅದನ್ನೆ ನಮ್ ಮೈಸೂರ್ ನಲಿ ಮಾಡ್ಬುಡಿ ಅಂತ ಒಂದ್ ಮಾತು ಎಸೆದ. ಆತನ ಮಾತನ್ನು ಗಂಭೀರವಾಗಿ ಯೋಚಿಸಿ ಹೌದಲ್ವ ಎಂದು ಅದರ ನೆನಪಿನಾರ್ಥಕವಾಗಿ ಮೈಸೂರಿನಲ್ಲಿ ಒಂದು ವಿಶ್ವವಿದ್ಯಾನಿಲಯ ಸ್ಥಾಪಿಸಿದರು. ಅದೇ ನಮ್ಮ ಮೈಸೂರು ವಿಶ್ವವಿದ್ಯಾನಿಲಯ. ಆ ವಿಶ್ವವಿದ್ಯಾನಿಲಯದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ. ಇಂದಿಗೂ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಲೂ ಇದ್ದಾರೆ. ಅಂತಹ ವಿಶ್ವವಿದ್ಯಾನಿಲಯದಲ್ಲಿ ಓದಿದ ನಾನು ಕೂಡ ಧನ್ಯ. ಅವರ ಜನ್ಮ ದಿನದ ಸಂದರ್ಭದಲ್ಲಿ ಒಕ್ಕೋರಲಿ ವಿಶ್ವವಿದ್ಯಾನಿಲಯದ ಪ್ರತಿಯೊಬ್ಬ ವಿದ್ಯಾರ್ಥಿಯೂ ನೆನೆಯಬೇಕು. ನಮ್ಮೊಳಗೆ ನಾಲ್ವಡಿ ನೆಲೆಯಾಗಬೇಕು.

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು