Tuesday 3 July 2018

short stories in kannada ಕನ್ನಡದ ನೀತಿ ಕತೆಗಳು

*ಪಾಪದ ಫಲ ಯಾರಿಗೆ* ?
-----------------------------
ಒಬ್ಬ ರಾಜನಿದ್ದ . ಆತ ಪ್ರತಿದಿನವೂ ಬ್ರಾಹ್ಮಣರಿಗೆ ಶ್ರದ್ಧೆಯಿಂದ ಅನ್ನಸಂತರ್ಪಣೆ ನಡೆಸುತ್ತಿದ್ದ .

ಒಂದು ದಿನ, ಬಯಲು ಪ್ರದೇಶವೊಂದರಲ್ಲಿ , ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು . ಮೇಲೆ ಆಕಾಶದಲ್ಲಿ  ಗಿಡುಗವೊಂದು, ಸತ್ತ ಹಾವನ್ನು, ಎತ್ತಿಕೊಂಡು ಹೋಗುತ್ತಿತ್ತು. ಆ ಸತ್ತ  ಹಾವಿನ ಬಾಯಿಯಿಂದ ಒಂದು ಬಿಂದು ವಿಷ , ರಾಜ ಹಂಚುತ್ತಿದ್ದ ಆಹಾರದ ಮೇಲೆ ಬಿದ್ದಿತು. ಹೀಗಾದದ್ದು ಯಾರಿಗೂ ಗೊತ್ತಾಗಲಿಲ್ಲ. ರಾಜ   ಆಹಾರ ಹಂಚುವುದನ್ನು ಮುಂದುವರಿಸಿದ .
ರಾಜನಿಂದ ವಿಷದ ಆಹಾರವನ್ನು ಪಡೆದ ಒಬ್ಬ ಬ್ರಾಹ್ಮಣ ಸತ್ತು ಹೋದ. ರಾಜ ಈ ಘಟನೆಯಿಂದ ತುಂಬಾ ನೊಂದುಕೊಂಡ.

ಈಗ, ಕರ್ಮಫಲದ ಹಂಚಿಕೆ ಮಾಡುವ ಚಿತ್ರಗುಪ್ತನಿಗೆ ಒಂದು ಸಂಧಿಗ್ಧವುಂಟಾಯಿತು. ಈ ಘಟನೆಯಲ್ಲಿ ಬ್ರಾಹ್ಮಣನ ಸಾವಿನ ಪಾಪದ ಫಲವನ್ನು , ಯಾರ ಲೆಕ್ಕಕ್ಕೆ ಬರೆಯುವುದೆಂದು, ಅವನಿಗೆ ತಿಳಿಯಲಿಲ್ಲ. ಅದು ಗಿಡುಗನ ತಪ್ಪಲ್ಲ. ಯಾಕೆಂದರೆ ಅದು ತನ್ನ ಆಹಾರವನ್ನು ತೆಗೆದುಕೊಂಡು ಹೋಗುತ್ತಿತ್ತು. ಸತ್ತ ಹಾವಿನ ತಪ್ಪಂತೂ ಖಂಡಿತಾ ಅಲ್ಲ. ರಾಜನ ತಪ್ಪೂ ಆಗಿರಲು ಸಾಧ್ಯವಿಲ್ಲ. ರಾಜನಿಗೆ ಆಹಾರದ ಮೇಲೆ ವಿಷ ಬಿದ್ದಿದ್ದು ಗೊತ್ತೇ ಇರಲಿಲ್ಲ .

ಚಿತ್ರಗುಪ್ತ ಸೀದಾ ಯಮಧರ್ಮನ ಬಳಿ ಹೋಗಿ ತನ್ನ ಸಮಸ್ಯೆಯನ್ನು ವಿವರಿಸಿದ. ಯಮಧರ್ಮ, ಅವನೊಡನೆ ತಾಳ್ಮೆಯಿಂದ ಕಾಯುವಂತೆ ಹಾಗೂ ಇನ್ನು ಕೆಲವೇ ದಿನಗಳಲ್ಲಿ ಆ ಸಮಸ್ಯೆಗೆ ಉತ್ತರ ಹೊಳೆಯುವುದಾಗಿಯೂ ತಿಳಿಸಿದ.

ಆ ನಂತರ ಸ್ವಲ್ಪ ದಿನಗಳಲ್ಲಿ , ರಾಜನನ್ನು ಭೇಟಿಯಾಗಲು ಕೆಲವು ಮಂದಿ ಬ್ರಾಹ್ಮಣರು, ಆ ಊರನ್ನು ಪ್ರವೇಶಿಸಿದರು. ಅರಮನೆಯ ದಾರಿ ಅವರಿಗೆ ಗೊತ್ತಿರಲಿಲ್ಲ. ಅಲ್ಲಿಯೇ ಮಾರ್ಗದ ಬದಿಯಲ್ಲಿ ಕುಳಿತು ಹೂ ಮಾರುತ್ತಿದ್ದ ಹೆಂಗಸಿನೊಡನೆ, 'ನಿನಗೆ ಅರಮನೆಯ ದಾರಿ ಗೊತ್ತಿದೆಯೇ ? ನಾವು ಅಲ್ಲಿಗೆ ಹೇಗೆ ಹೋಗಬಹುದು?' ಎಂದು ವಿಚಾರಿಸಿದರು. ಆಕೆ ಒಪ್ಪಿ, ಸರಿಯಾದ ದಾರಿಯನ್ನು ಅವರಿಗೆ ವಿವರಿಸಿ ಹೇಳಿದ ನಂತರ ಸೇರಿಸಿದಳು.   'ಆದರೆ ನೀವು ಜಾಗರೂಕರಾಗಿರಬೇಕು. ಏಕೆಂದರೆ ಆ ರಾಜ ಬ್ರಾಹ್ಮಣರನ್ನು ಕೊಲ್ಲುವನು.'

ಅವಳು, ರಾಜನು ಮಾಡದ ಪಾಪದ ಬಗ್ಗೆ ಕೆಟ್ಟದಾಗಿ ವಿಮರ್ಶೆ ಮಾಡಿದ ಕ್ಷಣದಲ್ಲಿಯೇ ಚಿತ್ರಗುಪ್ತನ ಪ್ರಶ್ನೆಗೆ ಉತ್ತರ ದೊರಕಿತು. ಆತ, ಬ್ರಾಹ್ಮಣ ಸತ್ತ ಪಾಪದ ಫಲವನ್ನು ಆಕೆಯ ಲೆಕ್ಕಕ್ಕೆ ಸೇರಿಸಿದ.

ಕಥೆಯ ನೀತಿ :
*ನಾವು ಯಾರಾದರೊಬ್ಬರ ಪಾಪದ ಬಗ್ಗೆ, ಆಡಿಕೊಂಡರೆ, ಮತ್ತು ನಾವು ಆಡಿದ ಮಾತು ಸುಳ್ಳಾಗಿದ್ದರೆ, ಆ ಪಾಪದ ಫಲ ನಮ್ಮ ಲೆಕ್ಕಕ್ಕೇ ಸಂಪೂರ್ಣವಾಗಿ ಸೇರಿಸಲ್ಪಡುವುದು.*

ಆದ್ದರಿಂದ ನಾವು ಇತರರ ಬಗ್ಗೆ  ಯೋಚಿಸುವಾಗ, ಮಾತನ್ನಾಡುವಾಗ ಜಾಗರೂಕರಾಗಿರೋಣ.
🌳👆ಎಲ್ಲರೂ ಓದಲೇಬೇಕಾಗಿರುವುದು 👆🌳

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು