ಕನ್ನಡ ಕವಿಗಳ ನುಡಿಮುತ್ತುಗಳು 卐 ' ಮನುಜಮತ, ವಿಶ್ವಪಥ, ಸರ್ವೋದಯ,ಸಮನ್ವಯ,ಪೂರ್ಣದೃಷ್ಟಿ - ಈ ಪಂಚಮಂತ್ರ ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ.ಅಂದರೆ, ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ; ಮನುಜಮತ. ಆ ಪಥ , ಈ ಪಥ ಅಲ್ಲ; ವಿಶ್ವಪಥ. ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ ; ಸರ್ವರ ಸರ್ವಸ್ತರದ ಉದಯ. ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; ಸಮನ್ವಯಗೊಳ್ಳುವುದು.ಮಿತಮತದ ಆಂಶಿಕ ದೃಷ್ಟಿಯಲ್ಲ; ಭೌತಿಕ , ಪಾರಮಾರ್ಥಿಕ ಎಂಬ ಭಿನ್ನ ದೃಷ್ಟಿಯಲ್ಲ; ಎಲ್ಲವನ್ನೂ ಭಗವದ್ ದೃಷ್ಟಿಯಿಂದ ಕಾಣುವ ಪೂರ್ಣದೃಷ್ಟಿ. ' ------------------------------------ ಕುವೆಂಪು. 卐 " ನನ್ನ ಪ್ರೌಢಶಾಲಾ ಶಿಕ್ಷಣ ಮುಗಿಯುವವರೆಗೂ ಕನ್ನಡ ಮಾಧ್ಯಮದಲ್ಲಿಯೇ ಓದಿದ್ದೇನೆ.ನಾನು ಕಾಲೇಜಿಗೆ ಹೋದಾಗ ಎಲ್ಲರಿಗಿಂತ ಉತ್ತಮವಾಗಿ ಇಂಗ್ಲೀಷ್ ಮಾತನಾಡುತ್ತಿದ್ದೆ.ನಾನು ಕನ್ನಡ ಮಾಧ್ಯಮದಲ್ಲಿಯೇ ಓದಬೇಕು , ಉತ್ತಮವಾಗಿ ಇಂಗ್ಲೀಷ್ ಮಾತನಾಡಬೇಕು ಎನ್ನುವುದು ತಂದೆಯ ಆಶಯವಾಗಿತ್ತು. ಆದರೆ ಇಂದು ಅತ್ತಕಡೆ ಇಂಗ್ಲೀಷ್ ಬಾರದೆ ಇತ್ತಕಡೆ ಕನ್ನಡವೂ ತಿಳಿಯದಿರುವ ಕಾಲದಲ್ಲಿ ನಾವಿದ್ದೇವೆ.ಉತ್ತಮ ಇಂಗ್ಲೀಷ್ ಹೇಳಿಕೊಡುವ , ಕನ್ನಡವನ್ನು ಕಲಿಸುವ ಶಿಕ್ಷಣ ನಮಗೆ ಬೇಕಾಗಿದೆ." ------------------------ಪ್ರೊಫೆಸರ್. ಸಿ.ಎನ್.ಆರ್.ರಾವ್. 卐 "ತನ್ನನ್ನು ತಾನು ಗುರುತಿಸಿಕೊಂಡು, ತನ್ನ ವಿಶೇಷವನ್ನು ಶಕ್ತಿಯ ಪರಿಮ...